ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಐತಿಹಾಸಿಕ ಮೈಲಿಗಲ್ಲಿನ ನೆನಪಿಗಾಗಿ, ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಸಂಘದ ಅಧಿಕೃತ ಲೋಗೋ ಒಳಗೊಂಡ ವಿಶೇಷ ಕಸ್ಟಮೈಸ್ಡ್ ಅಂಚೆ ಚೀಟಿಯನ್ನು (Special Commemorative Postal Stamp) ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರು ಮತ್ತು ಪತ್ರಕರ್ತರ ಸಂಘದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಈ ಮುದ್ರೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕರ್ನಾಟಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಸಂಘವೊಂದರ ಸಾಧನೆ ಗುರುತಿಸಿ ಅಂಚೆ ಇಲಾಖೆ ಚೀಟಿ ಹೊರತಂದಿರುವುದು ಇಡೀ ಜಿಲ್ಲೆಯ ಮಾಧ್ಯಮ ರಂಗಕ್ಕೆ ಸಂದ ಅತ್ಯಂತ ದೊಡ್ಡ ಗೌರವವಾಗಿದೆ.